Please wait...

ಸುಖೀ ದಾಂಪತ್ಯ ೧೫೮

ತಪ್ಪಿತಸ್ಥರು ಸರಿಯಾದ ದಿಕ್ಕಿನಲ್ಲಿ ಇಡುವ ಒಂದೊಂದು ಪುಟ್ಟ ಹೆಜ್ಜೆಗೂ ಅಗಾಧ ಭವಿಷ್ಯವಿದೆ.

೧೫೮: ಪರಸಂಬಂಧ–೨೧

ಪರಸಂಬಂಧದ ಬಗೆಗೆ ನಿರ್ಧರಿಸುವಾಗ ನೊಂದ ಸಂಗಾತಿಯು ತನ್ನ ಬೇಡಿಕೆಗಳನ್ನು ಹೇಗೆ ಮುಂದಿಡಬೇಕು, ಹಾಗೂ ತಪ್ಪಿತಸ್ಥ ಸಂಗಾತಿಯು ಅದನ್ನು ತನಗೆ ಹೇಗೆ ಅನ್ವಯಿಸಿಕೊಳ್ಳಬೇಕು ಎಂದು ಹೋದಸಲ ತಿಳಿದೆವು. ಇನ್ನು, ತಪ್ಪಿತಸ್ಥ ಸಂಗಾತಿಯು ಹೇಗೆ ಪ್ರತಿಕ್ರಿಯಿಸಬೇಕು ಎಂಬುದನ್ನು ಈಸಲ ನೋಡೋಣ.

ನೀವೊಂದುವೇಳೆ ತಪ್ಪಿತಸ್ಥ ಸಂಗಾತಿಯಾಗಿದ್ದಲ್ಲಿ, ನೊಂದ ಸಂಗಾತಿಯು ನಿಮ್ಮ ಮುಂದಿಡುವ ಬೇಡಿಕೆಗಳು ವಿಪರೀತ ಹಾಗೂ ಅನುಸರಿಸಲು ಅಸಾಧ್ಯ, ಹಾಗಾಗಿ ಅವರನ್ನು ಮೆಚ್ಚಿಸಲು ಆಗುವುದೇ ಇಲ್ಲ ಎಂದು ಅನ್ನಿಸುವುದು ಸಹಜ. ಯಾಕೆಂದರೆ ಈ ಬೇಡಿಕೆಗಳ  ಹಿಂದೆ ಯಾರು ಯಾರ ಆಧೀನದಲ್ಲಿ ಇರಬೇಕು ಎನ್ನುವ ಪಾರಮ್ಯದ ಸೆಣಸಾಟ ಇದೆ. ತನ್ನ ಪ್ರಾಬಲ್ಯವನ್ನು ಬಿಟ್ಟುಕೊಟ್ಟರೆ ಸಂಗಾತಿಯು ತಲೆಯಮೇಲೆ ಸವಾರಿ ಮಾಡಬಹುದು ಎಂದು ಭಯವಾಗುತ್ತದೆ. ಆದರೆ ಸ್ವಲ್ಪ ಯೋಚಿಸಿದರೆ ಇದರಲ್ಲಿ ಪ್ರಯೋಜನವೂ ಇರುವುದು ಕಾಣುತ್ತದೆ: ನಿಮ್ಮ ಮುಂಚಿನ ರೀತಿನಡತೆಗಳಲ್ಲಿ ಸ್ವಲ್ಪವಾದರೂ ಬದಲಾವಣೆ ತರಲು ಒಪ್ಪಿಕೊಂಡರೆ ಗಾಸಿಯಾದ ಸಂಗಾತಿಗೆ ನೀವು ಬದಲಾಗಲು ಶುರುವಾಗಿದ್ದು ಅರಿವಾಗುತ್ತದೆ. ಸಂಗಾತಿಯು ನಿಮ್ಮನ್ನು ಪುನಃ ನಂಬಲು ಸಹಾಯ ಮಾಡುತ್ತದೆ. ಅದರ ಫಲಶ್ರುತಿ ನಿಮ್ಮ ಅರಿವಿಗೆ ಬರದಷ್ಟು ಅಗಾಧವಾಗುತ್ತದೆ. ಯಾಕೆ? ಬದಲಾವಣೆಯು ತಪ್ಪಿತಸ್ಥರಾದ ನಿಮ್ಮಿಂದ ಶುರುವಾಗಿದೆ, ಹಾಗೂ ಎಷ್ಟೇ ಚಿಕ್ಕದಾದರೂ ಸರಿಯಾದ ದಿಕ್ಕಿನಲ್ಲೇ ಹೆಜ್ಜೆಯಿಟ್ಟಿದ್ದೀರಿ! ಇದರಿಂದ ನೀವಿಬ್ಬರೂ ಪರಸ್ಪರರನ್ನು ಮನಸ್ಸಿಗೆ ತಂದುಕೊಳ್ಳುವ ರೀತಿಯಲ್ಲೇ ಬದಲಾವಣೆ ಆಗುತ್ತದೆ. ಕಠಿಣವಾದ ಸಂಗಾತಿ ಮೃದುವಾಗುತ್ತಾರೆ. ದುಃಖ, ನಿರಾಕರಣೆ ದೂರವಾಗುತ್ತ ಆಶಯ, ಸ್ವೀಕೃತಿ ಕಾಣುತ್ತದೆ. ಅಗೌರವದ ಜಾಗದಲ್ಲಿ ಕಾಳಜಿ ಕಾಲಿಡುತ್ತದೆ.

ಹೋದಸಲ ಹೇಳಿದ್ದು ನೆನಪಿದೆಯೆ? ಸಂಗಾತಿಯ ಎಂದಿದ್ದೆ. ಈ ಬೇಡದ ವರ್ತನೆಗಳು ನಿಮ್ಮಲ್ಲಿವೆ ಜೊತೆಗೆ ನೀವು ತೋರುವ ಬೇಡವಾದ ವರ್ತನೆಗಳು ಎಲ್ಲಿಂದ ಬಂದುವು ಎನ್ನುವುದರ ಬಗೆಗೆ ಯೋಚಿಸಿ ಎಂದು ನಿಮ್ಮ ಸ್ನೇಹಿತವರ್ಗ, ಬಂಧುಬಳಗ, ಅಥವಾ ಮಾಜಿ ಪ್ರೇಮಿಯು ಹೇಳಿದ್ದು ಇದೆಯೆ ಎಂದು ಪ್ರಶ್ನಿಸಿಕೊಳ್ಳಿ ಎಂದೂ ಹೇಳಿದ್ದೆ. ಇವು ನಿಮ್ಮಲ್ಲಿದ್ದರೆ ನಿಮ್ಮ ಸಂಗಾತಿಯ ಜೊತೆಗಷ್ಟೇ ಅಲ್ಲ, ಯಾರ ಜೊತೆಗಾದಗೂ ಆತ್ಮೀಯ ಸಂಬಂಧವನ್ನು ಬೆಳೆಸಿಕೊಳ್ಳಲು ಅಡ್ಡಿಯಾಗಿವೆ ಎಂದಂತಾಯಿತು. ಈ ಗುಣಗಳೇ ನಿಮ್ಮ ದೌರ್ಬಲ್ಯ. ಹಾಗಾಗಿ ಬದಲಾವಣೆಯ ಕಹಿಮಾತ್ರೆಯನ್ನು ನೀವು ನುಂಗಲೇಬೇಕು. ಅಂದರೆ ನೀವು ಸಂಗಾತಿಯ ಜೊತೆಗಷ್ಟೇ ಅಲ್ಲ, ಎಲ್ಲರೊಂದಿಗೂ ಒಳ್ಳೆಯವರಾಗುವ ಸಾಧ್ಯತೆಯಿದೆ.

ಹಾಗೆಂದು ನೊಂದ ಸಂಗಾತಿಯು ಸೂಚಿಸಿದ ಎಲ್ಲ ಬದಲಾವಣೆಗಳನ್ನೂ ಸಾರಾಸಗಟಾಗಿ ಒಪ್ಪಬೇಕೆ? ಖಂಡಿತವಾಗಿಯೂ ಇಲ್ಲ. ಹೀಗೆ ಮಾಡುವುದರಲ್ಲಿ ಅನಾಹುತ ಇದೆ. ಆದರೆ ಅನೇಕರು ಕೇಳಿದ್ದಕ್ಕೆಲ್ಲ ಹಿಂದೆಮುಂದೆ ಯೋಚಿಸದೆ ಒಪ್ಪಿಬಿಡುತ್ತಾರೆ. ಸಂಗಾತಿಯನ್ನು ಕಳೆದುಕೊಳ್ಳುವ ಭಯ, ಅಥವಾ ಸಂಗಾತಿಯು ಒಡ್ಡುವ ಬೆದರಿಕೆಗೆ (“ನನ್ನ ಮಾತನ್ನು ಒಪ್ಪದಿದ್ದರೆ ನಿನ್ನ ಕೃತ್ಯವನ್ನು ಬಯಲಿಗೆ ತಂದು ಮರ್ಯಾದೆ ತೆಗೆಯುತ್ತೇನೆ!”) ಮಣಿಯುತ್ತಾರೆ. ಉದಾಹರಣೆಗೆ, ಒಬ್ಬಳು ಸಹೋದ್ಯೋಗಿಯೊಡನೆ ಸಂಬಂಧ ಇಟ್ಟುಕೊಂಡಿದ್ದಕ್ಕೆ ಗಂಡನು ಆಕೆಗೆ ಉದ್ಯೋಗ ಬಿಟ್ಟು ಮನೆಯಲ್ಲಿ ಕುಳಿತುಕೊಳ್ಳಲು ಅಪ್ಪಣೆ ಕೊಟ್ಟ. ಗಂಡನನ್ನು ಉಳಿಸಿಕೊಳ್ಳುವ ಧಾವಂತದಲ್ಲಿ ಆಕೆಯು ಕೆಲಸಕ್ಕೆ ರಾಜೀನಾಮೆ ಕೊಟ್ಟಿದ್ದಲ್ಲದೆ ಇನ್ನೆಂದೂ ಕೆಲಸಕ್ಕೇ ಹೋಗುವುದಿಲ್ಲ ಎಂದು ಮಾತುಕೊಟ್ಟಳು. ಕೆಲವು ದಿನಗಳ ನಂತರ ಆಕೆಗೆ ಒಂಟಿತನ ಕಾಡುತ್ತ, ಬೆಲೆಕಳೆದುಕೊಂಡು ಮೂಲೆಗುಂಪಾದ ಅನಿಸಿಕೆ ಶುರುವಾಯಿತು. ಅಷ್ಟಲ್ಲದೆ, ಕೇವಲ ಗಂಡನ ಸಂಪಾದನೆಯಲ್ಲಿ ಬದುಕು ಸಾಗಿಸುವುದು ದುಸ್ತರವಾಯಿತು. ಅವನೊಬ್ಬನೇ ಅವಧಿಮೀರಿ ದುಡಿಯುವುದನ್ನು ನೋಡಲು ಆಗದಂತಾಯಿತು. ಹಾಗೆಂದು ಪುನಃ ಕೆಲಸಕ್ಕೆ ಸೇರುವ ಪ್ರಸ್ತಾಪ ಎತ್ತಿದರೆ ಗಂಡನು ಆಕೆಯನ್ನು ಸಂದೇಹಿಸುವ ಸಂಭವವಿತ್ತು.  ಇನ್ನೊಂದು ಪ್ರಕರಣದಲ್ಲಿ ಒಬ್ಬನು ತನ್ನ ಆಫೀಸಿನ ಸ್ವಾಗತಕಾರ್ತಿಯ ಜೊತೆಗೆ ಸಂಬಂಧ ಇಟ್ಟುಕೊಂಡವನು ಹೆಂಡತಿಯ ಒತ್ತಾಯಕ್ಕೆ ಒಳಗಾಗಿ ಆಕೆಯನ್ನೇ ಸ್ವಾಗತಕಾರ್ತಿಯನ್ನಾಗಿ ನೇಮಿಸಿದ. ಆಕೆಗೆ ಅದರಲ್ಲಿ ತರಬೇತಿ ಇಲ್ಲದಿದ್ದುದರಿಂದ ಅವನ ವ್ಯವಹಾರ ನೆಲಕಚ್ಚಿತು. ಹಾಗೆಂದು ಎಲ್ಲವೂ ತೊಂದರೆ ಆಗಬೇಕೆಂದಿಲ್ಲ. ಮತ್ತೊಂದು ಪ್ರಕರಣದಲ್ಲಿ ಊರೂರು ತಿರುಗುವ ಉದ್ಯೋಗವಿದ್ದ ಗಂಡನು ಪರಸಂಬಂಧದ ಕಾರಣದಿಂದ ರಾಜೀನಾಮೆ ಕೊಡಬೇಕಾಯಿತು. ಆಗವನು ಹೆಂಡತಿಯು ನಡೆಸುವ ಪ್ರವಾಸೋದ್ಯಮಕ್ಕೆ ಸಹಾಯಕನಾಗಿ ಸೇರಿಕೊಂಡ. ಇಬ್ಬರೂ ಕೈಸೇರಿಸಿ ದುಡಿದರು. ಈಗ ಹಲವಾರು ಶಾಖೆಗಳನ್ನು ತೆರೆದಿದ್ದಾರಲ್ಲದೆ ಅವರ ಬಾಂಧವ್ಯವೂ ಅಗಾಧವಾಗಿ ಬೆಳೆದಿದೆ.

ಇಲ್ಲೊಂದು ಮಾತು: ತಪ್ಪಿತಸ್ಥರಾದ ನೀವು ನಿಮ್ಮಲ್ಲಿ ಬದಲಾವಣೆ ತರುವುದು ಸರಿಯೆ. ಹಾಗೆಂದು ನೊಂದ ಸಂಗಾತಿಯಲ್ಲಿ ದೋಷಗಳಿದ್ದರೆ ಅವರು ತಿದ್ದಿಕೊಳ್ಳದೆ ದಾಂಪತ್ಯವು ಸುಧಾರಣೆ ಹೊಂದಲಾರದು. ಕೆಲವೊಮ್ಮೆ ನೊಂದ ಸಂಗಾತಿಯು ತನ್ನಲ್ಲಿರುವ ದೋಷಗಳನ್ನು ಅರ್ಥಮಾಡಿಕೊಳ್ಳದೆ ಅವುಗಳಿಂದ ಉಂಟಾಗುತ್ತಿರುವ ಅಸಂತೋಷವನ್ನು ನಿಮ್ಮಿಂದ ಉಂಟಾಯಿತೆಂದು ನಿಮ್ಮನ್ನು ಹೊಣೆಮಾಡುವುದು ಸಾಧ್ಯವಿದೆ. ಒಬ್ಬಳು ಗಂಡನ ಪರಸಂಬಂಧದ ಕಾರಣದಿಂದ ಅಣ್ಣನ ಸಂಬಂಧವನ್ನು ಕಳೆದುಕೊಳ್ಳಬೇಕಾಯಿತು ಎಂದು ಗಂಡನನ್ನು ದೂರಿದಳು. ವಾಸ್ತವವಾಗಿ ಆಕೆಗೂ ಅಣ್ಣನಿಗೂ ಭಿನ್ನಾಭಿಪ್ರಾಯ ಮೊದಲಿನಿಂದಲೂ ಇತ್ತು. ಗಂಡನ ಪರಸಂಬಂಧವನ್ನು ಅಣ್ಣನಲ್ಲಿ ಹೇಳಿಕೊಂಡಾಗ ಆತ, “ನಾನೆಷ್ಟೇ ಬೇಡವೆಂದರೂ ನೀನೇ ಅವನನ್ನು ಮದುವೆಯಾದೆ. ನೀನೇ ಅನುಭವಿಸು!” ಎಂದಿದ್ದ.

ನೊಂದ ಸಂಗಾತಿಯ ದೋಷಗಳನ್ನು ಪತ್ತೆಹಚ್ಚುವುದು ಹೇಗೆ? ಅದಕ್ಕಾಗಿ ಕೆಲವು ಅಂಶಗಳು ಸಹಾಯ ಮಾಡಬಹುದು ಎಂದು ಜಾನಿಸ್ ಸ್ಪ್ರಿಂಗ್ ಹೇಳುತ್ತಾಳೆ:

  • ನಿಮ್ಮ ಸಂಗಾತಿಯು ಯಾವ ಗುಣಗಳನ್ನು ಮೆಚ್ಚಿ ನಿಮ್ಮನ್ನು ಆರಿಸಿಕೊಂಡಿದ್ದರೋ ಅವುಗಳನ್ನೇ ಈಗ ತಿರಸ್ಕರಿಸುತ್ತ ಬೈದುಕೊಳ್ಳುವುದು. ಉದಾ. ನಿಮ್ಮ ಚೂಟಿತನ ಹಾಗೂ ಯಾವುದಕ್ಕೂ ತಕ್ಷಣ ಸ್ಪಂದಿಸುವ ಗುಣವನ್ನು ಸಂಗಾತಿಯು ಮೆಚ್ಚಿದ್ದಾರೆ ಎಂದುಕೊಳ್ಳಿ. ಪರಸಂಗದ ನಂತರ ಇದನ್ನು ಮುಂದಾಲೋಚನೆ ಇಲ್ಲದ ಬೇಜವಾಬ್ದಾರಿ ಗುಣ ಎಂದು ಟೀಕಿಸಬಹುದು.
  • ನೊಂದ ಸಂಗಾತಿಯಲ್ಲಿ ಇಲ್ಲದಿರುವ ಕೆಲವು ಗುಣಗಳು ನಿಮ್ಮಲ್ಲಿದ್ದು, ಅದರ ಬಗೆಗೆ ಅವರಿಗೆ ಮತ್ಸರ ಇರುವುದು. ಉದಾ. ನೀವು ಇತರರನ್ನು ಮೆಚ್ಚಿಸುವಂಥ ಮಾತುಗಾರರಾಗಿದ್ದು, ನೊಂದ ಸಂಗಾತಿಯು ಹಾಗಿಲ್ಲ ಎಂದುಕೊಳ್ಳಿ. ನೀವು ದೂರವಾಣಿಯಲ್ಲಿ ನಗುತ್ತ ಮಾತಾಡುವಾಗ ನೊಂದ ಸಂಗಾತಿಯು “ಮತ್ತ್ಯಾರನ್ನೋ ಬಲೆಗೆ ಹಾಕಿಕೊಳ್ಳುತ್ತಿದ್ದೀಯಾ” ಎಂದು ಸಂದೇಹಿಸುವುದು.
  •  ತಪ್ಪಿತಸ್ಥರಾದ ನಿಮ್ಮನ್ನು ಹೀನಾಯವಾಗಿ ಕಾಣುತ್ತ, ನಿಮ್ಮ ಹುಟ್ಟಡಗಿಸುವಂತೆ ದಬ್ಬಾಳಿಕೆ ಮಾಡುತ್ತ ಗುಲಾಮನ/ಳಂತೆ ನಡೆಸಿಕೊಳ್ಳುವುದು. ಉದಾ. ಒಬ್ಬಳು ಪಕ್ಕದ ಮನೆಯವನನ್ನು ಇಷ್ಟಪಟ್ಟಿರುವ ಕಾರಣಕ್ಕೆ ಗಂಡನು ಮನೆಯ ಎಲ್ಲ ಕಿಟಿಕಿಗಳಿಗೆ ಮೊಳೆ ಹೊಡೆದು ಮುಚ್ಚಿಬಿಟ್ಟಿದ್ದಾನೆ. ಇನ್ನೊಬ್ಬಳ ಗಂಡನು ಪರಸಂಬಂಧದ ನಂತರ ಹೆಂಡತಿಗೆ ಪ್ರತಿ ಗಂಟೆಗೂ ಕರೆಮಾಡಿ ತನ್ನ ಚಲನವಲನದ ಮಾಹಿತಿಯನ್ನು ಕೊಡದಿದ್ದರೆ ಅವಳೇ ಕರೆಮಾಡಿ ಇವನ ಮರ್ಯಾದೆ ತೆಗೆಯುತ್ತಾಳೆ.
  • ನೊಂದ ಸಂಗಾತಿಯನ್ನು ಕಳೆದುಕೊಳ್ಳುವ ಭಯದಿಂದ ಅವರು ಪಾಲಿಸಲಿಕ್ಕೆ ಆಗದ ಕಟ್ಟಪ್ಪಣೆಗಳನ್ನು ಅನುಸರಿಸುವುದು. ಉದಾ. ಇವನು ಕೆಲಸದವಳಿಗೆ ಹತ್ತಿರವಾಗಿದ್ದನ್ನು ಕಂಡ ಹೆಂಡತಿಯು ಆಕೆಯನ್ನು ಬಿಡಿಸಿ ಇವನಿಗೇ ಮನೆಗೆಲಸ ಹಚ್ಚಿದ್ದಾಳೆ. ಇವನು ಒಪ್ಪಿಕೊಂಡು ಮಾಡುವಾಗ ಕೆಲಸಕ್ಕೆ ತಡವಾಗಿ ಹೋಗುತ್ತ ಉದ್ಯೋಗವನ್ನು ಕಳೆದುಕೊಳ್ಳುವ ಮಟ್ಟಕ್ಕೆ ಬಂದಿದ್ದಾನೆ.

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.

About

logo-white

Medisex Foundation, (formerly known as Foundation of Sexual Medicine) is set up to help people have a healthy sense of sexuality; improve emotional and sexual intimacy in marriage; and have healthy and proactive family relationships.

Contact us

ADDRESS
MEDISEX FOUNDATION
# 877, 18th Main, 60th Cross (Near Water Tank)
5th block, Rajajinagar
Bangalore-560 010, Karnataka,India

EMAIL
vinod.chebbi@gmail.com
nchebbi@gmail.com
askme@medisex.org

PHONE
Primary No.: +91 8494944888
Doctor/Therapist (only whatsApp text ): +91 84949 44888

Copyright by Medisex Foundation 2020-21. All rights reserved.