Please wait...

ಸುಖೀ ದಾಂಪತ್ಯ ೨೪೭

ಪುರುಷ ಪ್ರಧಾನತೆಗೆ ವಿರುದ್ಧವಾಗಿ ಸ್ತ್ರೀವಾದವನ್ನು ಅನುಷ್ಠಾನಕ್ಕೆ ತರಲು ನಾವು ಸಿದ್ಧರಿದ್ದೆವೆಯೆ?

247: ಅನ್ಯೋನ್ಯತೆಗೆ ಹುಡುಕಾಟ – 26

ಸರಳಾ-ಭೀಮಯ್ಯ ದಂಪತಿಯ ಕತೆ ಓದಿ ಹಲವು ಪ್ರತಿಕ್ರಿಯೆಗಳು ಬಂದಿವೆ. ಇದರಲ್ಲಿ ದೀರ್ಘವಾಗಿರುವ ಒಂದನ್ನು ಉಲ್ಲೇಖಿಸುತ್ತಿದ್ದೇನೆ. ಇವರ ಸಂಬಂಧದ ಕುರಿತು ಚಿಂತನಶೀಲ ಲೇಖಕಿಯೊಬ್ಬರು ಹೀಗೆ ಬರೆದಿದ್ದಾರೆ. ಜೊತೆಗೆ ಪ್ರಶ್ನೆಗಳನ್ನೂ ಎತ್ತಿದ್ದಾರೆ. ಅವುಗಳನ್ನು ಒಂದೊಂದಾಗಿ ಉತ್ತರಿಸಲು ಯತ್ನಿಸಿದ್ದೇನೆ:

  1. ಸರಳೆಯ ಬದುಕಿಗೂ ನನ್ನದಕ್ಕೂ ಹೋಲಿಕೆಯಿದೆ. ನಾನೂ ಬಾಲ್ಯದಲ್ಲಿ ಅಲಕ್ಷ್ಯಕ್ಕೀಡಾಗಿದ್ದೇನೆ. ಪುರುಷ ಪ್ರಧಾನತೆಯ ಏಟುತಿಂದು ನರಳಿದ್ದೇನೆ ಆದರೆ ಶರಣಹೋಗದೆ ಅದರ ಸಾಮರ್ಥ್ಯವನ್ನು ಪ್ರಶ್ನಿಸಿದ್ದೇನೆ. ನಿಮ್ಮ ಬರಹದ ಬಗೆಗೆ ನನಗೆ ಅನ್ನಿಸಿದ್ದು ಏನೆಂದರೆ, ನೀವು ಮತ್ತೆ ಮತ್ತೆ ಪುರುಷ ಪ್ರಧಾನತೆಯ ಕಡೆಗೇ ತಿರುಗುತ್ತಿದ್ದೀರಿ. ಸರಳೆಯನ್ನು ಗಂಡ ಬೆಂಬಲಿಸಲಿಲ್ಲ ಎನ್ನುವುದು ನಿಜ. ಆದರೆ ಸ್ವತಃ ಅವನನ್ನು ಅರ್ಥಮಾಡಿಕೊಳ್ಳಲು, ಬೆಂಬಲಿಸಲು ಯಾರಿದ್ದಾರೆ? ಅವನಲ್ಲೂ ಪೂರೈಸಲು ಆಗದಿರುವ ಅಗತ್ಯಗಳು ಸಾಕಷ್ಟಿರಬಹುದು. ಅಂದರೆ ಪುರುಷ ಪ್ರಧಾನ ವ್ಯವಸ್ಥೆಯು ಹೆಂಗಸರಿಗೆ ಕೆಟ್ಟದ್ದು ಮಾಡಿದಂತೆ ಗಂಡಸರಿಗೂ ಕೆಟ್ಟದ್ದು ಮಾಡಿದೆ. ಅದಕ್ಕೆ ನೀವು ಗಮನ ಕೊಟ್ಟಂತಿಲ್ಲ.

ಉತ್ತರ: ಹೌದು, ಪುರುಷ ಪ್ರಧಾನತೆಯಿಂದ ನೊಂದ ಹೆಂಗಸರ ಬಗೆಗೆ ಮತ್ತೆ ಮತ್ತೆ ಬರೆಯುತ್ತಿದ್ದೇನೆ. ಯಾಕೆಂದರೆ ನನ್ನಲ್ಲಿ ಬರುವವರಲ್ಲಿ ಇಂಥ ಹೆಂಗಸರೇ ಹೆಚ್ಚಾಗಿದ್ದಾರೆ. ತಲೆಮಾರುಗಳಿಂದ ಬಂದ ಈ ಜಾಡ್ಯದಿಂದ  ಗಂಡಸರೂ ಅಷ್ಟೇ ನರಳುತ್ತಿದ್ದಾರೆ – ಅವರ ಬಗೆಗೆ “ಪುರುಷರ ನಾಕ-ನರಕ” ಎಂಬ ಶೀರ್ಷಿಕೆಯಲ್ಲಿ ವಿವರಿಸಿದ್ದೇನೆ (ಕಂತುಗಳು 192-204). ಭೀಮಯ್ಯನನ್ನು ಬೆಂಬಲಿಸಲು ಯಾರಿದ್ದಾರೆ ಎಂದು ನೀವು ಕೇಳಿರುವುದು ಸೂಕ್ತವಾಗಿದೆ. ಅವನು ನಡೆದುಕೊಳ್ಳುವುದನ್ನು ನೋಡಿದರೆ (ಉದಾ. ಅಪ್ಪನ ಮಾತಿಗೆ ಹೆಂಡತಿಯನ್ನು ಹೊಡೆದುದು) ಅವನಿಗೆ ಸ್ವಂತಬುದ್ಧಿ ಬೆಳೆಯಲು ಅವಕಾಶ ಸಿಕ್ಕಿಲ್ಲ. ಹಾಗಾಗಿ ಭಾವನಾತ್ಮಕವಾಗಿ ಅವನಿನ್ನೂ ಕುಟುಂಬದೊಂದಿಗೆ ಬೆಸೆದುಕೊಂಡಿದ್ದು, ಅವರ ಮರ್ಜಿ ಕಾಯುತ್ತಿದ್ದಾನೆ.

  • ಈ ದಂಪತಿಗಳಲ್ಲಿ ಇನ್ನೂ ಪ್ರೀತಿ ಹುಟ್ಟಿಯೇ ಇಲ್ಲ. ಅವರೀಗ ಮದುವೆ ಎಂದಾಗಿದ್ದಾರಷ್ಟೆ. ಪ್ರೀತಿ ಬೆಳೆದಮೇಲೆ ಸಾಧ್ಯವಾಗಬಹುದಾದ ಕೆಲಸಗಳನ್ನು ಪ್ರೀತಿ ಇಲ್ಲದಿರುವಾಗ ಮಾಡಲು ಹಚ್ಚುತ್ತಿದ್ದೀರಿ ಎನಿಸುತ್ತದೆ.

ಉತ್ತರ: ಹೌದು, ಮೊದಲು ಪ್ರೀತಿ ಬೆಳೆಯಬೇಕು. ಪರಿಚಯವಿಲ್ಲದೆ ಮದುವೆಯಾದವರಿಗೆ ಪ್ರೀತಿ ಕಟ್ಟಿಕೊಳ್ಳಲು ಸಮಯ, ಜಾಗ ಬೇಕಲ್ಲವೆ? ಅದಕ್ಕೇ ಪ್ರತ್ಯೇಕ ವಾಸದ ಮಾತು ಬಂದಿದೆ.

  • ಸರಳಾ ಭಾವಬಂಧದ ಮೂಲಕ ಬಾಂಧವ್ಯವನ್ನು ಹುಟ್ಟುಹಾಕುವಂತೆ ಭೀಮಯ್ಯ ಕೂಡ ಕಾಮಕ್ರಿಯೆಯ ಮೂಲಕ ಬಾಂಧವ್ಯಕ್ಕೆ ಹುಟ್ಟುಹಾಕುತ್ತಿದ್ದಾನೆ. ನೀವು ಹೆಂಡತಿಯ ಅಗತ್ಯಗಳಿಗೆ ಗಮನ ನೀಡುತ್ತಿದ್ದೀರಿ ವಿನಾ ಗಂಡನ ಅಗತ್ಯಗಳಿಗೆ ಇಲ್ಲ. ಇಲ್ಲಿ ಉಪಯೋಗಿಸಿದ ಪುರುಷ ಪ್ರಧಾನತೆಯ ಚೌಕಟ್ಟು ಅಷ್ಟು ಸೂಕ್ತವಲ್ಲ ಎಂದು ಅನಿಸುತ್ತದೆ.

ಉತ್ತರ: ಹೌದು, ಅನ್ಯೋನ್ಯತೆಯಿಂದ ಕೂಟದಲ್ಲಿ ರೋಚಕತೆ ಹುಟ್ಟುವಂತೆ ರೋಚಕವಾದ ಕೂಟದಿಂದಲೂ ಅನ್ಯೋನ್ಯತೆ ಹುಟ್ಟಲು ಸಾಧ್ಯವಿದೆ – ಕೂಟದ ನಂತರ ಪರಸ್ಪರ ಹಂಚಿಕೊಳ್ಳುವುದು ನಡೆದರೆ ಮಾತ್ರ. ಆದರೆ ಸ್ವಂತಿಕೆ ಅಷ್ಟಾಗಿ ಬೆಳೆಯದಿರುವ ಗಂಡಸರು ಉದ್ರೇಕದ ಮೇಲೆ ಭಾರವೂರಿ ಕೂಟಕ್ಕೆ ಹಾತೊರೆಯುತ್ತಾರೆ. ಅದು ಮುಗಿದಮೇಲೆ ಸಂಗಾತಿಯಿಂದ “ದೂರವಾಗಿ” ನಿದ್ರಿಸಲು ಇಷ್ಟಪಡುತ್ತಾರೆ. ಅದೇ ಹೆಂಗಸರು ಆತ್ಮೀಯವಾಗಿ ಬೆರೆಯುವ ಕಾಲ. ಹಂಚಿಕೊಳ್ಳುವುದು ನಡೆಯದಿದ್ದಲ್ಲಿ ಹೆಣ್ಣಿಗೆ ಕೊಟ್ಟು ಖಾಲಿತನ ಅನ್ನಿಸುತ್ತದೆ. ಸರಳಾ ಇದಕ್ಕೆ ಹೊರತಲ್ಲ. ಅದಲ್ಲದೆ ಆಕೆಗೆ ಬೇರೆ ಅವಕಾಶವಾದರೂ ಎಲ್ಲಿದೆ? ಅನ್ಯೋನ್ಯತೆ ಹುಟ್ಟಲು ನಿರಂತರ ಚರ್ಚೆ ನಡೆಯಬೇಕಾಗುತ್ತದೆ. ಅಷ್ಟಲ್ಲದೆ, ಮನ ತೆರೆದುಕೊಳ್ಳುವುದು ಎಂದರೆ ಕುಟುಂಬದ ವಿರುದ್ಧ ಎನ್ನುವವನ ಜೊತೆಗೆ ಹೇಗೆ ಬೆರೆತಾಳು?

ಇನ್ನು, ಭೀಮಯ್ಯನ ಸ್ಠಿತಿಯನ್ನು ಗಮನಿಸಿ: ಮೂಲ ಕುಟುಂಬದ ಜೊತೆಗೆ ಗುರುತಿಸಿಕೊಂಡಿರುವುದು ಜವಾಬ್ದಾರಿ ಹಾಗೂ ಕರ್ತವ್ಯನಿಷ್ಠೆಯ ಮೂಲಕವೇ ವಿನಾ ಪ್ರೀತಿಯನ್ನು ಕೊಡು-ತೆಗೆದುಕೊಳ್ಳುವುದರಿಂದ ಅಲ್ಲ. ಅದೇ ಕಾರಣದಿಂದ ಅವನು ಬೆಸೆದುಕೊಂಡಿದ್ದು ವ್ಯಕ್ತಿ ಪ್ರತ್ಯೇಕತೆಯನ್ನು (differentiation) ಬೆಳೆಸಿಕೊಂಡಿಲ್ಲ. ಅವನು ಮನೆ ಬಿಡದಿರಲು ಪುರುಷ ಪ್ರಧಾನತೆ ಅಲ್ಲದೆ ಬೇರೆ ಕಾರಣಗಳಿವೆ: ತನ್ನವರಿಂದ ದೂರವಾಗುವ ಭಯದ ಜೊತೆಗೆ ಅವನಿಗೆ ಹೆಂಡತಿಯ ಹತ್ತಿರವಾಗಲೂ ಭಯವಿದೆ! ಯಾಕೆಂದರೆ ಶೈಶವದಲ್ಲಿ ಅಗತ್ಯವಾಗಿರುವ ಪ್ರೀತಿವಾತ್ಸಲ್ಯಗಳು ಸಿಗದೆ ಭಾವನಿರಸನವಾಗಿ, ಏಕಾಂಗಿಭಾವದ ನಂಟನ್ನು (avoidant attachment style) ಬೆಳೆಸಿಕೊಂಡಿದ್ದಾನೆ. ಅವನಿಗೆ ಪ್ರೀತಿಯನ್ನು ಹೇಗೆ ವಿನಿಮಯಿಸಬೇಕು ಎನ್ನುವುದು ಸ್ಪಷ್ಟವಿಲ್ಲ.  ಹಾಗಾಗಿ ಹೆಂಡತಿಯ ಜೊತೆ ಪ್ರತ್ಯೇಕ ವಾಸದಲ್ಲಿ ದಾಂಪತ್ಯಕ್ಕೆ ತನ್ನ ಕೊಡುಗೆ ಏನು ಎಂಬುದೂ ತಿಳಿದಿಲ್ಲ. ಹಾಗಾಗಿ ಮೂಲಕುಟುಂಬದಿಂದ ಹೊರಬಂದು ಮಾಡುವುದಾದರೂ ಏನು?

  • ಈಗ ಸ್ತ್ರೀವಾದದ ಬಗೆಗೆ: ಗಂಡಸೆಂದು ಹುಟ್ಟಿರುವುದರಿಂದಲೇ ಅನೇಕರಿಗೆ ತೊಂದರೆಯಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಉದಾ. ಮಗಳ ಅಲಂಕಾರಕ್ಕೆ ಕೈಸಡಿಲಿಸಿ ಖರ್ಚುಮಾಡುವ ಹೆತ್ತವರು ಮಗನ ಅಗತ್ಯಗಳಿಗೆ ಕೈ ಬಿಗಿಹಿಡಿಯುತ್ತಾರೆ. ಮಗ-ಮಗಳು ಇಬ್ಬರೂ ಗಳಿಸುವಾಗ ಮಗಳ ಗಳಿಕೆಯನ್ನು ಮುಟ್ಟದೆ ಮಗನಿಗೆ ಮಾತ್ರ ಖರ್ಚುಹೊರಲು ನಿರೀಕ್ಷಿಸುತ್ತಾರೆ. ಹಾಗಾಗಿ ಸ್ತ್ರೀವಾದವು ಗಂಡಸರ ವಿರುದ್ಧದ ತಾರತಮ್ಯದಿಂದ ಆಗುವ ನೋವನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಅಲ್ಲದೆ, ಇತ್ತೀಚಿನ ತಾಯ್ತಂದೆಯರು ಗಂಡುಮಕ್ಕಳನ್ನು ಬಿಟ್ಟು ಹೆಣ್ಣುಮಕ್ಕಳನ್ನು ವೈಭವೀಕರಿಸುತ್ತಾರೆ. ಇದು ಮತ್ತೆ ಕುಟುಂಬದಲ್ಲಿ ಭೇದಭಾವದ ರಾಜಕೀಯಕ್ಕೆ ದಾರಿಯಾಗುತ್ತದೆ.

ಉತ್ತರ: ಹೌದು, ಇದು ನನ್ನ ಅನುಭವಕ್ಕೂ ಬಂದಿದೆ. ಬಾಲ್ಯದಲ್ಲಿ ತಾಯ್ತಂದೆಯರು ನನ್ನ ತಂಗಿಯ ಅಲಂಕಾರಕ್ಕೆ ಹೆಚ್ಚು ಖರ್ಚು ಮಾಡುತ್ತಿದ್ದರು. ಪ್ರಶ್ನಿಸಿದರೆ, “ಹೆಂಗಸರಿಗೆ ಸೌಂದರ್ಯವೇ ಮರ್ಯಾದೆ; ಗಂಡಸರಿಗೆ ಮರ್ಯಾದೆಯೇ ಸೌಂದರ್ಯ. ಸರಳ ಉಡುಪಿನಿಂದ ವ್ಯಕ್ತಿತ್ವ ಬೆಳೆಸಿಕೋ” ಎನ್ನುತ್ತಿದ್ದರು. ಅವರ ವರ್ತನೆಯು “ತಾಯ್ತಂದೆಯರು ನನ್ನ ಪಾಲಿಗಿಲ್ಲ” ಎನ್ನುವ ವ್ಯಥೆ ಕೊಟ್ಟಿದ್ದಲ್ಲದೆ ತಂಗಿಯೊಡನೆ ಬಾಂಧವ್ಯ ಕಟ್ಟಿಕೊಳ್ಳಲು ಬಹುಕಾಲ ಅಡ್ಡಿಯಾಗಿತ್ತು.

  • ಪುರುಷ ಪ್ರಧಾನ ವ್ಯವಸ್ಥೆಯನ್ನು ಅನುಸರಿಸುವ ಎಲ್ಲ ಕುಟುಂಬಗಳೂ ದುರ್ವರ್ತನೆಯಲ್ಲಿ ತೊಡಗಿಲ್ಲ. ಇವು ಹೇಗೆ ತಮ್ಮ ನೆಮ್ಮದಿಯನ್ನು ಹೇಗೆ ಕಾಪಾಡಿಕೊಂಡಿವೆ? ಏಟುತಿಂದು ಬಿದ್ದಾಗ ಪುನಶ್ಚೇತನ ಹೊಂದುವುದು ಒಂದು ಕಾರಣ. ಏನ್ನೇನು ಇರಬಹುದು?

ಉತ್ತರ: ಇಲ್ಲಿಯ  ಪುರುಷನ ಔದಾರ್ಯ, ಹಾಗೂ ನಾನು ಅನುಭವಿಸಿದ್ದು ನನ್ನ ಮಕ್ಕಳೂ ಅನುಭವಿಸಬಾರದು ಎನ್ನುವ ಅರಿವು ತಿಳಿವಳಿಕೆಯ ಬಾಂಧವ್ಯಕ್ಕೆ ಸೆಲೆಯಾಗುತ್ತದೆ ಎಂದು ಅನಿಸುತ್ತದೆ.

  • ಅನೇಕ ಅಪ್ಪಂದಿರು ಹೆಣ್ಣಿನ ಅಂತಿಮ ಗುರಿಯು ದಾಂಪತ್ಯ ಹಾಗೂ ಮಕ್ಕಳನ್ನು ಬೆಳೆಸುವುದರಲ್ಲೇ ಇದೆಯೆಂದು ನಂಬುತ್ತಾರೆ. ಹಾಗೆಂದು ಅವರೆಲ್ಲ ಮಗಳ ನೋವಿಗೆ ಸ್ಪಂದಿಸುವುದಿಲ್ಲ ಎಂದಲ್ಲ. ಹಾಗಾಗಿ ಸಮಸ್ಯೆಯು ಪುರುಷ ಪ್ರಧಾನತೆಯನ್ನು ಮೀರಿದೆ ಎಂದೆನಿಸುತ್ತದೆ.

ಉತ್ತರ: ಸರಿಯಾಗಿ ಹೇಳಿದಿರಿ. ನಾನು ನೋಡುತ್ತಿರುವ ಇತ್ತೀಚಿನ ದಾಂಪತ್ಯಗಳಲ್ಲಿ ತಂದೆಯಂದಿರು ಹೆಣ್ಣುಮಕ್ಕಳ ಹಿತಕ್ಕಾಗಿ ವಿಚ್ಛೇದನಕ್ಕೂ ಒಪ್ಪುತ್ತಿದ್ದಾರೆ.

ಒಟ್ಟಿನಲ್ಲಿ ನಿಮ್ಮ ಅಭಿಪ್ರಾಯ, ದೃಷ್ಟಿಕೋನ ನನಗೆ ಹಿಡಿಸಿತು. ಸ್ತ್ರೀವಾದವು ಕೇವಲ ಹೆಂಗಸರಿಗಾಗಿ ಹುಟ್ಟಿದ್ದಲ್ಲ, ಇದೊಂದು ಎಲ್ಲರ ಹಿತ ಬಯಸುವ ನೈತಿಕ ಮಾರ್ಗವೆಂದು ನಾನೂ ಒಪ್ಪುತ್ತೇನೆ. ಹೊಸ ಒಳನೋಟ ಕೊಟ್ಟಿದ್ದಕ್ಕೆ ಧನ್ಯವಾದಗಳು!

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.

About

logo-white

Medisex Foundation, (formerly known as Foundation of Sexual Medicine) is set up to help people have a healthy sense of sexuality; improve emotional and sexual intimacy in marriage; and have healthy and proactive family relationships.

Contact us

ADDRESS
MEDISEX FOUNDATION
# 877, 18th Main, 60th Cross (Near Water Tank)
5th block, Rajajinagar
Bangalore-560 010, Karnataka,India

EMAIL
vinod.chebbi@gmail.com
nchebbi@gmail.com
askme@medisex.org

PHONE
Primary No.: +91 8494944888
Doctor/Therapist (only whatsApp text ): +91 84949 44888

Copyright by Medisex Foundation 2020-21. All rights reserved.